ಬೆಂಗಳೂರು, ಜೂ ೩: ತಮಿಳು ನಟ ಕಮಲ್ ಹಾಸನ್ ಅವರು ಕನ್ನಡ ಭಾಷೆಯ ಬಗ್ಗೆ ನೀಡಿದ ವಿವಾದಾತ್ಮಕ ಹೇಳಿಕೆಯಿಂದ ಕನ್ನಡಿಗರು ಗರಂ ಆಗಿದ್ದಾರೆ. ಕನ್ನಡ ಭಾಷೆ ತಮಿಳಿನಿಂದ ಹುಟ್ಟಿದ್ದು ಎಂದು ದಡ್ಡತನದ ಹೇಳಿಕೆಯೊಂದನ್ನು ನೀಡಿ ಕನ್ನಡ ಚಿತ್ರರಂಗದಲ್ಲೂ ಒಂದು ಕಾಲದಲ್ಲಿ ಮೆರದ ನಟ, ಇಂದು ತಮ್ಮ ಹೊಸ ತಮಿಳು ಚಿತ್ರ ʼಥಗ್ ಲೈಫ್ʼ ಅನ್ನು ಕರುನಾಡಿನಲ್ಲಿ ಬಿಡುಗಡೆ ಮಾಡಲು ಹರಸಾಹಸ ಪಡುತ್ತಿದ್ದಾರೆ. ವಿಪರ್ಯಾಸವೆಂದರೇ, ಈ ಹೇಳಿಕೆ ನೀಡಿದ್ದು ʼಥಗ್ ಲೈಫ್ʼ ಸಿನಿಮಾದ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಅದೂ ಕರುನಾಡ ಚಕ್ರವರ್ತಿ ಡಾ ಶಿವರಾಜ್ ಕುಮಾರ್ ಅವರ ಸಮ್ಮುಖದಲ್ಲಿ.
ಹೇಳಿಕೆಗೆ ಕರುನಾಡಿನ ಜನತೆ ಕೆಂಡಾಮಂಡಲವಾಗಿದ್ದು, ಸ್ಯಾಂಡಲ್ವುಡ್ನ ಬಹುತೇಕ ಹಿರಿಯ-ಕಿರಿಯ ನಟ ನಟಿಯರು ಕಮಲ್ ಹಾಸನ್ ಅವರ ದಡ್ಡತನದ ಹೇಳಿಕೆಗೆ ವ್ಯಾಪಕವಾಗಿ ವಿರೋಧಿಸಿದ್ದರು. ಕನ್ನಡ ಪರ ಹೋರಾಟಗಾರರು ಕೂಡ ಕಮಲ್ ಹಾಸನ್ ಅವರು ಕ್ಷಮೆ ಯಾಚಿಸಬೇಕು, ಇಲ್ಲದಿದ್ದರೆ, ಅವರ ಚಿತ್ರವನ್ನು ಕರ್ನಾಡಕದಲ್ಲಿ ಬಿಡುಗಡೆಗೊಳಿಸಲು ಅವಕಾಶ ನೀಡುವುದಿಲ್ಲ ಎಂದು ಧರಣಿಗಳನ್ನ ಮಾಡಿದ್ದಾರೆ. ಇಷ್ಟಾದರೂ ಕಮಲ್ ಹಾಸನ್ ಅವರು ಕನ್ನಡಿಗರಲ್ಲಿ ಕ್ಷಮೆ ಕೇಳದೆ ಉದ್ಧಟತನ ಮೆರೆದಿದ್ಧಾರೆ.
ಇನ್ನೂ ಈ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿದೆ. ತಮ್ಮ ‘ಥಗ್ ಲೈಫ್’ ಚಿತ್ರ ಕರ್ನಾಟಕದಲ್ಲಿ ಬಿಡುಗಡೆಗೆ ಅವಕಾಶ ನೀಡುವಂತೆ ಮತ್ತು ಭದ್ರತೆ ಕೋರಿ ಕಮಲ್ ಹಾಸನ್ ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದಾರೆ. ಆದರೇ ಅದೇ ಕೋರ್ಟ್ ಈಗ ಕಮಲ್ ಹಾಸನ್ಗೆ ಛೀಮಾರಿ ಹಾಕಿದೆ. ಮೊದಲು ಕ್ಷಮೆ ಕೇಳಿ ಎಂದು ನ್ಯಾಯಾಲಯ ಹೇಳಿದೆ. ಕಮಲ್ ಹಾಸನ್ ಅವರನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. “ಸಿ. ರಾಜಗೋಪಾಲಚಾರಿ ಇದೇ ರೀತಿಯ ಹೇಳಿಕೆ ನೀಡಿದ್ದರು. ನಂತರ ಅವರು ಕ್ಷಮಾಯಾಚನೆ ಮಾಡಿದ್ದರು. ಆದರೆ ಕಮಲಹಾಸನ್ ಯಾವುದೇ ಕ್ಷಮಾಯಾಚನೆ ಮಾಡಿಲ್ಲ” ಎಂದು ಏಕ ಸದಸ್ಯ ಪೀಠ ತಿಳಿಸಿದೆ.
“ಸಿನಿಮಾ ಮಾಡಿರೋದು ವಾಣಿಜ್ಯ ಉದ್ದೇಶದಿಂದ. ಈಗ ತಪ್ಪು ಮಾಡಿದ್ದಾರೆ. ಅಂದಮೇಲೆ ಕ್ಷಮೆ ಕೇಳಬೇಕು. ನೀವು ಮಾಡಿದ ತಪ್ಪಿಗೆ ಪೊಲೀಸರು ಭದ್ರತೆ ನೀಡಬೇಕೇ” ಎಂದು ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಪೀಠ ಕಮಲ್ ಹಾಸನ್ ಅವರ ವಕೀಲರನ್ನು ತರಾಟೆಗೆ ತೆಗೆದುಕೊಂಡಿತು.
“ನಿಮ್ಮ ಹೇಳಿಕೆಯಿಂದ ಶಿವರಾಜಕುಮಾರ್ ಅನುಭವಿಸುವಂತಾಗಿದೆ. ಶಿವರಾಜುಕುಮಾರ್ಗೆ ಕೂಡ ಇದರಿಂದ ಸಮಸ್ಯೆಯಾಗಿದೆ. ನಿಮ್ಮ ಹೇಳಿಕೆ ನೀರಾಕರಿಸಿದ್ದೀರಾ? ಇಲ್ಲ. ನೀವು ಹೇಳಿಕೆಯನ್ನು ನಿರಾಕರಿಸಿಲ್ಲ, ಒಪ್ಪಿಕೊಂಡಿದ್ದೀರಾ. ನೀವು ಕ್ಷಮೆಯಾಚಿಸಿದರೆ ಸಮಸ್ಯೆ ಇಲ್ಲ. ಆದರೆ ಕಮಲ್ ಕ್ಷಮೆಕೇಳಲು ಸಿದ್ದವಿಲ್ಲ” ಎಂದು ಛೀಮಾರಿ ಹಾಕಿದ್ದಾರೆ.
“ಕರ್ನಾಟಕದಲ್ಲಿ ಚಿತ್ರಯಾಕೆ ಬಿಡುಗಡೆಯಾಗಬೇಕು? ನಿಮ್ಮ ತಪ್ಪಿಗೆ ಪೊಲೀಸರು ಭದ್ರತೆ ನೀಡಬೇಕೇ? ನಾನೂ ಥಗ್ ಲೈಫ್ ಸಿನಿಮಾ ನೋಡಲು ಬಯಸಿದ್ದೆ. ಆದರೆ ಈ ವಿವಾದದಿಂದ ನೋಡಲು ಸಾಧ್ಯವಿಲ್ಲ. ಆದೇಶ ಹೊರಡಿಸಲು ನಮಗೆ ಸಮಸ್ಯೆ ಇಲ್ಲ. ಕ್ಷಮೆ ಕೇಳಲಾಗದಿದ್ದರೆ ಬಿಡಿ. ಕರ್ನಾಟಕದಲ್ಲಿ ಬಿಡುಗಡೆ ಏಕೆ ಬೇಕು? ಯಾರೊಬ್ಬರ ಭಾವನೆಯ ಮೇಲೆ ಸವಾರಿ ಮಾಡಬಾರದು” ಎಂದು ಹೇಳಿದ್ದಾರೆ.
“1950 ರಲ್ಲಿ ರಾಜಗೋಪಾಲಾಚಾರಿ ಕ್ಷಮೆ ಕೇಳಿದ್ದಾರೆ. ಈಗ ನಿಮ್ಮ ತಪ್ಪಿಗೆ ಕ್ಷಮೆ ಕೇಳಲು ಏನು ಸಮಸ್ಯೆ. 300 ಕೋಟಿಯ ಸಿನಿಮಾ ಎನ್ನುತ್ತಿದ್ದೀರಾ, ಕ್ಷಮೆಯಾಚನೆ ಮಾಡಿ. ನಿಮ್ಮ ನಿಲುವೇನು ತಿಳಿಸಿ” ಎಂದು ಹೈಕೋರ್ಟ್ ಸೂಚನೆ ನೀಡಿದೆ.
ಅರ್ಜಿ ವಿಚಾರಣೆಯನ್ನು ಮಧ್ಯಾಹ್ನ 2.30 ಕ್ಕೆ ಮುಂದೂಡಿಕೆ ಮಾಡಿದ್ದು, ನಿಲುವು ಎಂದು ತಿಳಿಸಲು ಸಮಯ ನೀಡಲಾಗಿದೆ.
ಥಗ್ ಲೈಫ್ ಚಿತ್ರ ಈ ತಿಂಗಳ 5 ರಂದು ದೇಶಾದ್ಯಂತ ಬಿಡುಗಡೆಯಾಗಲಿದೆ. ಆದರೆ ಕರ್ನಾಟಕದಲ್ಲಿ ಬಿಡುಗಡೆಯ ಬಗ್ಗೆ ಅನಿಶ್ಚಿತತೆ ಇದೆ. ಕಮಲ್ ಅರ್ಜಿಯ ಕುರಿತು ನ್ಯಾಯಾಲಯದ ತೀರ್ಪಿನ ಬಗ್ಗೆ ಸಾಕಷ್ಟು ಉತ್ಸಾಹವಿದೆ. ಸುಮಾರು 35 ವರ್ಷಗಳ ನಂತರ ನಿರ್ದೇಶಕ ಮಣಿರತ್ನಂ ಮತ್ತು ಕಮಲ್ ಹಾಸನ್ ಒಂದಾಗುತ್ತಿರುವ ಈ ಚಿತ್ರದ ಮೇಲೆ ಭಾರಿ ನಿರೀಕ್ಷೆಗಳಿವೆ.
ಈ ವಿಷಯದ ಕುರಿತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ‘ಈಗ ಕೋರ್ಟ್ ಹೇಳಿದೆ. ಕಮಲ್ ಹಾಸನ್ ಅವರು ನ್ಯಾಯಾಲಯಕ್ಕೆ ಗೌರವ ಕೊಡುತ್ತಾರೆ. ನಮ್ಮವರು ಯಾರೂ ಕೂಡ ಕಾನೂನು ಕೈಗೆ ತೆಗೆದುಕೊಳ್ಳಬಾರದು. ಪ್ರತಿಭಟನೆ ಮಾಡಲಿ, ತಪ್ಪಿಲ್ಲ. ಆದರೆ ಯಾರೂ ಕೂಡ ಚಿತ್ರಮಂದಿರಗಳ ಬಳಿ ಹೋಗಿ ಗಲಾಟೆ ಮಾಡಬಾರದು. ಜಾತಿ ಕಲಹ ಉಂಟುಮಾಡುವ ಕೆಲಸ ದಯವಿಟ್ಟು ಮಾಡಬಾರದು’ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.