ನವದೆಹಲಿ, ಜೂನ್ 3: ಭಾರತೀಯ ಸಂಪರ್ಕಕ್ಕೆ ಒಂದು ಮಹತ್ವದ ಹೆಜ್ಜೆಯಾಗಿ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆಯಾದ ಚೆನಾಬ್ ಸೇತುವೆಯನ್ನು (Chenab Railway Bridge) ಜೂನ್ 6ರಂದು ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸಲಿದ್ದಾರೆ. ಕೇಂದ್ರ ಬಾಹ್ಯಾಕಾಶ ಸಚಿವ ಡಾ ಜಿತೇಂದ್ರ ಸಿಂಗ್ ಅವರು ಈ ಸೇತುವೆಯ ಮಹತ್ವವನ್ನು ಒತ್ತಿ ಹೇಳಿ ಈ ಮಹತ್ವದ ಕಾರ್ಯಕ್ರಮವನ್ನು ಘೋಷಿಸಿದರು. ಜಮ್ಮು ಮತ್ತು ಕಾಶ್ಮೀರದ ಉಧಂಪುರ-ಶ್ರೀನಗರ-ಬಾರಾಮುಲ್ಲಾ ರೈಲ್ವೆ ಲಿಂಕ್ (USBRL) ಯೋಜನೆಯ ಪ್ರಮುಖ ಅಂಶವೆಂದರೆ ಈ ಸೇತುವೆ ಎಂದು ಅವರು ಎತ್ತಿ ತೋರಿಸಿದರು. ಇದು ಬಹು ಮುಖ್ಯವಾಗಿ ಕಾಶ್ಮೀರ ಕಣಿವೆಯನ್ನು ಭಾರತದ ಉಳಿದ ಭಾಗಗಳೊಂದಿಗೆ ರೈಲು ಮೂಲಕ ನೇರವಾಗಿ ಸಂಪರ್ಕಿಸುತ್ತದೆ.
ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಸವಾಲಿನ ಭೂಪ್ರದೇಶದಲ್ಲಿ ನೆಲೆಗೊಂಡಿರುವ ಐಕಾನಿಕ್ ಚೆನಾಬ್ ರೈಲ್ವೆ ಸೇತುವೆಯು ಎಂಜಿನಿಯರಿಂಗ್ ಅದ್ಭುತವಾಗಿದ್ದು, ನದಿಪಾತ್ರದಿಂದ 359 ಮೀಟರ್ (1,177 ಅಡಿಗಳಿಗಿಂತ ಹೆಚ್ಚು) ಎತ್ತರಕ್ಕೆ ಏರುತ್ತದೆ. ಇದು ಪ್ಯಾರಿಸ್ನಲ್ಲಿರುವ ಐಫೆಲ್ ಟವರ್ಗಿಂತ ಎತ್ತರವಾಗಿದೆ ಮತ್ತು ಕುತುಬ್ ಮಿನಾರ್ ಗಿಂತ ಐದು ಪಟ್ಟು ಎತ್ತರವಾಗಿದೆ ಎಂಬುದು ಹೆಮ್ಮೆಯ ಸಂಗತಿ.
ವಿಜ್ಞಾನದ ಸವಾಲು
ಭಾರತದ ಇತ್ತೀಚಿನ ರೈಲ್ವೆ ಇತಿಹಾಸದಲ್ಲಿ ಈ ಸೇತುವೆಯ ಕಾಮಗಾರಿ ಲೋಕೋಪಯೋಗಿ ಶಿಲ್ಪ ವಿಜ್ಞಾನದ ಅತೀ ದೊಡ್ಡ ಸವಾಲಾಗಿತ್ತು. ೨೦೦೩ರಲ್ಲಿ ಅನುಮೋದನೆಗೊಂಡಿದ್ದ ಈ ಸೇತುವೆ ಕಾಮಾಗಾರಿ ಪೂರ್ಣಗೊಳ್ಳು ಬರೋಬ್ಬರಿ ಎರಡು ದಶಕಗಳಿಗೂ ಅಧಿಕ ಸಮಯ ಹಿಡಿದಿದೆ. ಸೇತುವೆ ನಿರ್ಮಾಣಕ್ಕೆ, -10 ಡಿಗ್ರೀ ಸೆಲ್ಸಿಯಸ್ ರಿಂದ 40 ಡಿಗ್ರೀ ಸೆಲ್ಸಿಯಸ್ ನಡುವಿನ ತಾಪಮಾನದಲ್ಲಿ ಬಳಸುವಂತಾದ 28,660 ಮೆಗಟನ್ (2,86,60,000 ಕಿಲೋಗ್ರಾಮ್) ಸ್ಟೀಲ್ ಬಳಸಲಾಗಿದೆ. 1.31 ಕಿ.ಮೀ. ಉದ್ದದ ಈ ಸೇತುವೆ, ಅತೀ ಹೆಚ್ಚು ತೀವ್ರತೆಯ ಭೂಕಂಪ ತಡೆಯುವ ಸಾಮರ್ಥ್ಯವುಳ್ಳದ್ದಾಗಿದ್ದು, ಗಂಟೆಗೆ ೨೬೬ ಕಿ ವೇಗದಲ್ಲಿ ಬೀಸುವ ಗಾಳಿಯ ವೇಗವನ್ನೂ ತಡೆಯುವ ಶಕ್ತಿಯಿದೆ.
ಪ್ರವಾಸ- ವ್ಯಾಪಾರ
ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸುವುದಲ್ಲದೇ, ಈ ಸೇತುವೆ ವರ್ಷ ಪೂರ್ತಿ ಕಣಿವೆ ರಾಜ್ಯದ ಪ್ರದೇಶಗಳಿಗೆ ಸರಕುಗಳನ್ನು, ಅನಿವಾರ್ಯ ವಸ್ತುಗಳು, ವೈದ್ಗಯಕೀಯ ಸಾಮಗ್ರಿಗಳು ಸಾಗಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಅಲ್ಲದೇ, ವ್ಯಾಪಾರಿಗಳಿಗೆ ಅದರಲ್ಲೂ ಹಣ್ಣು ಬೆಳೆಗಾರರಿಗೆ ಈ ರೈಲ್ವೇ ಲಿಂಕ್ ನಿಂದ ಅಧಿಕ ಲಾಭವಾಗಲಿದೆ. ಅವರು ತಮ್ಮ ಬೆಳೆಯನ್ನು ಸಕಾಲಕ್ಕೆ ದೆಹಲಿಗೆ ಕಳುಹಿಸಬಹುದಾಗಿದೆ.