ಪರಿಸರ ದಿನಾಚರಣೆ ಬಂತೆಂದರೆ ಹಸಿರೇ ನಮ್ಮ ಉಸಿರು, ಕಾಡಿದ್ದರೆ ನಾಡು, ಕಾಡು ಬೆಳೆಸಿ ನಾಡು ಉಳಿಸಿ – ಎಂದಲ್ಲಾ ಕೇಳುತ್ತೇವೆ ನೋಡುತ್ತೇವೆ ಓದುತ್ತೇವೆ. ಆದರೆ ನಾವು ಎಷ್ಟರಮಟ್ಟಿಗೆ ಇದೆಲ್ಲವನ್ನು ಪಾಲಿಸುತ್ತೇವೆ ಎಂದು ಒಮ್ಮೆಯಾದರೂ ಯೋಚಿಸಿದ್ದೀವಾ? ದಿನನಿತ್ಯದ ಬಳಕೆಗೆ ಬೇಕಾಗಿರುವ ಸವಲತ್ತುಗಳ ಹಿಂದೆ ಎಷ್ಟು ಕಾಡಿನ ಹರಣವಿದೆ ಎಂದು ನಮಗೆ ತಿಳಿದಿದೆಯಾ? ಮನುಷ್ಯರ ಐಷಾರಾಮಿ ಜೀವನಕ್ಕಾಗಿ ಎಷ್ಟು ಪರಿಸರ ನಾಶ ನಾಶವಾಗಿದೆ ಎಂಬುದು ನಮಗೆ ಅರಿಯದ ಸಂಗತಿ ಏನಲ್ಲ. ಆದರೂ ದಿನನಿತ್ಯದ ಬೇಕು ಬೇಡಗಳ ಹಿಂದೆ ಓಡುವ ಜೀವನ ನಿಲ್ಲುವುದಿಲ್ಲ.

ಪತ್ರಕರ್ತರೂ, ಲೇಖಕರೂ, ಪರಿಸರ ಪ್ರಾಜ್ಞರು, ಕಾಡಿನ ಪ್ರೇಮಿಗಳೂ ಆಗಿರುವ ಉತ್ತರ ಕನ್ನಡ ಜಿಲ್ಲೆಯ ನರೂರಿನ ಶ್ರೀಯುತ ರಘುನಂದನ ಭಟ್ಟರು ಕಾಡಿನ ನೋವು ನಲಿವುಗಳನ್ನು ಕಂಡವರು. ಪರಿಸರದ ಕಷ್ಟ ಸುಖಗಳೊಂದಿಗೆ ಬೆರೆತವರು. ತಮ್ಮ ಮನೆಯ ಹಿತ್ತಲಿನಲ್ಲೇ ಒಂದು ಚಿಕ್ಕ ಕಾಡನ್ನು ಬೆಳೆಸಿದವರು. ಅನೇಕ ಜಾತಿಯ ಕಂಡರೆಯದ ಮಾವುಗಳು ಹಲಸುಗಳು ಅಲ್ಲದೇ ಅನೇಕರಿಗೆ (ನನ್ನನ್ನೂ ಸೇರಿದಂತೆ) ತಿಳಿಯದ ವಿಧವಿಧವಾದ ಹಣ್ಣು ಹಂಪಲುಗಳ ಪ್ರಭೇದ ಇವರ ಪುಟ್ಟ ಕಾಡು ಹೊಂದಿದೆ. ಹಾಗಂತ ರುಚಿಕರವಾದ ಹಣ್ಣು ಹಂಪಲುಗಳನ್ನು ಇವರು ಪೂರ್ಣವಾಗಿ ಬಳಸಿಕೊಳ್ಳುವವರು ಏನಲ್ಲ. ಕಾಲಕಾಲಕ್ಕೆ ಬಿಡುವ ಹಣ್ಣು ಕಾಯಿಗಳು ಮೊದಲು ಇವರ ಹಿತ್ತಲೆಗೆ ಭೇಟಿ ನೀಡುವ ವಿವಿಧ ಪ್ರಾಣಿಯ ಪಕ್ಷಿ ಕೀಟಗಳಿಗೆ ನೈವೇದ್ಯವಾಗುತ್ತದೆ. ಒಮ್ಮೆಯೂ ಯಾವ ಪ್ರಾಣಿ ಪಕ್ಷಿಗಳನ್ನು ಇವರು ಓಡಿಸಿದ್ದು ಇಲ್ಲವೆನ್ನಿಸುತ್ತದೆ. ಯಾರಾದರೂ ಅಪ್ಪಿ ತಪ್ಪಿ ಮಂಗಗಳಿಂದ ಪಕ್ಷಿಗಳಿಂದ ಹಣ್ಣುಗಳನ್ನ ರಕ್ಷಿಸಬಾರದೇ? ಎಂದು ಕೇಳಿದರು ಅಂದುಕೊಳ್ಳಿ. ಸ್ಥಿರವಾದ, ಗಾಂಭೀರ್ಯ ತುಂಬಿದ ಧ್ವನಿಯಲ್ಲಿ ‘ಮನುಷ್ಯರಾದರೂ ದುಡ್ಡು ಕೊಟ್ಟು ಅಂಗಡಿಯಲ್ಲಿ ಕೊಳ್ಳಬಹುದು. ಆದರೆ ಪ್ರಾಣಿಗಳು ಪಕ್ಷಿಗಳು ಎಲ್ಲಿ ಹೋಗಬೇಕು? ಹೇಗೆ ತಿನ್ನಬೇಕು? ಎಲ್ಲರೂ ತಮ್ಮ ಹಿತ್ತಲಿನಿಂದ ಅವುಗಳನ್ನು ಓಡಿಸಿದರೆ, ಅವುಗಳು ಏನನ್ನ ತಿನ್ನಬೇಕು? ಮನುಷ್ಯನ ದುರಾಸೆಗೆ ಕಾಡಿನಲ್ಲಿ ಕೂಡ ಹಣ್ಣು ಹಂಪಲು ಮರಗಳಿಲ್ಲ. ಅಲ್ಲೆಲ್ಲ ಹಣ್ಣುಗಳು ಬಿಡದ, ಮನುಷ್ಯರಿಗೆ ದುಡ್ಡು ತಂದು ಕೊಡುವ ಮರಗಳದ್ದೇ ದರ್ಬಾರು,’ ಎಂದು ಹೇಳಿ ನಮ್ಮನ್ನೇ ಯೋಚನೆಗೆ ದೂಡುತ್ತಾರೆ. ಹೀಗೂ ಯೋಚಿಸಬಹುದಾದಂತಹ ಮನುಷ್ಯರು ನಮ್ಮ ನಡುವೆ ಇದ್ದಾರ ಎಂಬುದೇ ಆಶ್ಚರ್ಯವಾಗುತ್ತದೆ. ಇವರ ಕಾಡು ಹಾಗೂ ಪರಿಸರದ ಕುರಿತು ಮಾತುಗಳು ಹಾಗಿರುತ್ತೆ. ಪ್ಯಾಟೆ ಮಂದಿಗಂತೂ ಈ ಮಾತುಗಳನ್ನು ಕೇಳಿ ದಿಗ್ಭ್ರಮೆಯಾಗುವುದು ಖಂಡಿತ.

ಶ್ರೀಯುತ ರಘುನಂದನ ಭಟ್ಟರ ಕಾಡಿನ ಕಾಳಜಿ, ಪರಿಸರದ ಪ್ರೀತಿ ಕುರಿತ ಒಂದು ಪುಟ್ಟ ಬರಹ ಇಲ್ಲಿದೆ.

ಕಳೆದ ೩೫ ವರ್ಷಗಳ ಹಿಂದೆ ಸರಕಾರದ ಹಸ್ತಕ್ಷೇಪದಿಂದಾಗಿಯೇ ಕರ್ನಾಟಕವೊಂದರ ಸಹ್ಯಾದ್ರಿ ಶ್ರೇಣಿಯಲ್ಲಿ ಎಷ್ಟು ಹೆಕ್ಟೇರ್ ಅರಣ್ಯ ನಿರ್ಣಾಮವಾಗಿದೆಯೆಂಬುದರ ಸಣ್ಣ ಲೆಕ್ಕ ಹೀಗಿದೆ. ನೀರಿನಲ್ಲಿ ಮುಳುಗಿಸಿದ್ದು ೩೫,೮೪೦; ಗಣಿಗಾರಿಕೆಯಲ್ಲಿ ನಾಶವಾಗಿದ್ದು ೪೨,೬೭೬; ಪುರ್ನವಸತಿಗೆಂದು ನೆಲಸಮ ೨೫,೮೨೦; ಕಾಳಿ ಯೋಜನೆಗೆ ಬಲಿಯಾಗಿದ್ದು ೧೨,೫೦೦; ಚಕ್ರಾ ಯೋಜನೆಗೆ ಬಲಿಯಾಗಿದ್ದು ೨,೬೦೦; ವರಾಹಿ ಯೋಜನೆಗೆ ಬಲಿಯಾಗಿದ್ದು ೧೮,೬೩೪; ಗಂಗಾವತಿಗೆ ಬಲಿಯಾಗಿದ್ದು ೧೦,೦೩೯; ರಸ್ತೆ, ಪಟ್ಟಣ, ವಿದ್ಯುತ್ ತಂತಿಗೆ ೧೦,೪೦೧; ಕೃಷಿಗೆ ಪರಿವರ್ತಿಸಿದ್ದು ೬೭,೨೧೭; ಹೀಗೆ ಒಟ್ಟೂ ೨,೨೨,೭೨೭ ಹೆಕ್ಟೇರ್ ಅರಣ್ಯ ನಾಶವಾಗಿದೆ. ಸದ್ಯದ ಅಂಕಿ ಅಂಶಗಳ ಪ್ರಕಾರ ಇದರ ದುಪ್ಪಟ್ಟು ನಾಶವಾಗಿರಬಹುದು ಅಥವಾ ಇನ್ನೂ ಹೆಚ್ಚು! ಇದರಲ್ಲಿ ಕಟ್ಟಿಗೆಗೆಂದು ಅರಣ್ಯ ಇಲಾಖೆಯವರು ಚೊಕ್ಕ ಬೋಳಿಸಿದ ಲೆಕ್ಕ ಸೇರಿಲ್ಲ. ನೀಲಗಿರಿ, ಸಾಗವಾನಿ, ಅಕೇಶಿಯ, ರಬ್ಬರಗಳಂತ ಏಕಸಸ್ಯ ಬೆಳೆಸಲೆಂದು ನಿರ್ಣಾಮ ಮಾಡಿದ ಕಾಡುಗಳ ಲೆಕ್ಕ ಇದರಲ್ಲಿ ಸೇರಿಲ್ಲ. ಖಾಸಗಿ ಉದ್ದಿಮೆಯವರು, ಕೃಷಿಹಿಡುವಳಿದಾರರು ನೆಲಸಮ ಮಾಡಿದ ಅರಣ್ಯ ಕ್ಷೇತ್ರಗಳ ಲೆಕ್ಕವಿಲ್ಲ. ಈ ಅರಣ್ಯ ಹುಟ್ಟುವಳಿಗಳನ್ನೇ ಆಧರಿಸಿ ಒಟ್ಟೂ ೫,೮೦೩ಕ್ಕೂ ಹೆಚ್ಚುಉದ್ದಿಮೆಗಳು ಪಶ್ಚಿಮ ಘಟ್ಟಗಳಲ್ಲಿ ಕೆಲಸ ಮಾಡುತ್ತಿವೆ. ಸುಮಾರು ಒಂದು ಕೋಟಿ ಹತ್ತು ಲಕ್ಷಕ್ಕೂಅಧಿಕ ಜನ ಈ ಪಶ್ಚಿಮಘಟ್ಟಗಳಲ್ಲಿ ಕಾರ್ಯನಿರತರಾಗಿದ್ದಾರೆ. ಸಹ್ಯಾದ್ರಿ ಸಹನೆ ಕಳೆದುಕೊಳ್ಳುತ್ತಿದೆ. ಸಹಸ್ರಾರು ವರ್ಷಗಳ ಸಹ್ಯಾದ್ರಿ ಈಗ ಅಸಹ್ಯ ಪರ್ವತಗಳಾಗಿವೆ.

Shares:

Related Posts

Nothing Found! Ready to publish your first post? Get started here.

Leave a Reply

Your email address will not be published. Required fields are marked *